ಟೈಂಪಾಸ್

ಸಂಜೆ ಬಾನಿನಂಚಿನಲ್ಲಿ...
ಸಂಜೆ ಬಾನಿನಂಚಿನಲ್ಲಿ ಬಿದ್ದ ಬಿದಿಗೆ ಚಂದಿರ
ಶಚೀತೀರ್ಥದಾಳದಲ್ಲಿ ಶಕುಂತಲೆಯ ಉಂಗುರ

ದೂರ್ವಾಸರ ಶಾಪವಿಗೋ ಕವಿಯುತಿಹುದು ಸುತ್ತಲೂ
ಕಂಡುದೆಲ್ಲ ಜಾರುತಿಹುದು ಮೆಲ್ಲನಿರುಳ ತಮದೊಳು

ಅಸಹಾಯಕ ತಾರೆಬಳಗ ಹನಿಗಣ್ಣೊಳು ನೀರವ
ಸುಯ್ವ ಗಾಳಿ ತಡೆಯುತಿಹುದು ಉಕ್ಕಿಬರುವ ದುಃಖವ
-ಜಿ.ಎಸ್.ಶಿವರುದ್ರಪ್ಪನವರು

ನಾನು ಅತಿಯಾಗಿ ಪ್ರೀತಿಸುವ ಭಾವಗೀತೆಗಳಲ್ಲೊಂದು ಈ ಹಾಡು.ನನಗೆ ಬುದ್ಧಿ ತಿಳಿದಾಗಿನಿಂದಲೂ ಅದೆಷ್ಟು ಬಾರಿ ಕೇಳಿ ಮೋಹಿತನಾಗಿದ್ದೇನೋ ನನಗೇ ತಿಳಿಯದು.ಈ ಗೀತೆಯ ಪದ-ಪ್ರಯೋಗ,ಲಾಲಿತ್ಯ,ಭಾವಾರ್ಥ, ಸಿ.ಆಶ್ವಥ್‍ರ ಸಂಗೀತ, ರತ್ನಮಾಲಿ ದನಿ ನನ್ನನ್ನು ಸದಾ ಕಾಡಿದೆ.
ಒಲ್ಲದ ಮನಸ್ಸಿನಿಂದಲೇ ಜಿಎಸ್‍ಎಸ್ ಕ್ಷಮೆ ಕೋರುತ್ತಾ ಇದಕ್ಕೊಂದು ಅಣಕುವಾಡು ಬರೆಯೋ ಮೂರ್ಖ ಕೆಲಸವೊಂದನ್ನು ಮಾಡಿದ್ದೇನೆ.ಒಮ್ಮೆ ಓದಿ ನಕ್ಕುಬಿಡಿ.

ಸಂಡೆ ಬಾರಿನಂಚಿನಲಿ...
ಸಂಡೆ ಬಾರಿನಂಚಿನಲಿ ಬಿದ್ದ ಕುಡುಕ ಸುಂದರಾ
ಮಲ್ಯನ್‍ ತೀರ್ಥದಾಳದಲ್ಲಿ ಎಂಗೇಜ್‍ಮೆಂಟಿನುಂಗುರ

ಹಳೇ ಲವ್ವರ್ರಿನ ಶಾಪವಿಗೋ ಇರಿಯುತಿಹುದು ಸುತ್ತಲೂ
ಉಂಡುದೆಲ್ಲ ಕಕ್ಕುತಿಹನು ಚಿಕ್ಕಕರುಳ ಶ್ರಮದೊಳು

ಸ್ವಸಹಾಯಕ ಬಾರ್-ಬಳಗ ಕೆಂಗಣ್ಣೊಳು ಖಾರವ?
ರಾತ್ರಿಪಾಳಿ ಕರೆಯುತಿಹುದು,ಬಂದು ಕೊಡುವೆ ಲೆಕ್ಕವ

ಈ ಗೀತೆಯನ್ನು ನೀವಿನ್ನೂ ಕೇಳಿಲ್ಲದೇ ಹೋದಲ್ಲಿ ಈಗಲೇ ರತ್ನಮಾಲ ಪ್ರಕಾಶ್ ದನಿಯಲ್ಲಿ ಇಲ್ಲಿ ಕೇಳಿ ನೋಡಿ

ಲೇಬಲ್‌ಗಳು: , , ,

ಸಂಜೆಗಣ್ಣು


ದಿಗಂತದಾಚೆಕಡೆಯೆಲ್ಲೋ ದೂರದಲಿ
ಮೋಡಗಳ ಹಾಸಿಹೊದ್ದ
ಸೂರ್ಯನಾಕಳಿಕೆ,ಮೈಮುರಿತ,ತೂಕಡಿಕೆ


ದಿಕ್ಕೆಟ್ಟು ಗೂಡಕಡೆ
ಹಾ!
ರುತಿರುವ ಹಕ್ಕಿಹಿಂಡು,ದಟ್ಟಣೆ,ಹೊಗೆ,ಕೆಂಧೂಳಿ


ಗದ್ದಲ ಗೊಂದಲಗಳ ನಡುವೆಯೂ
ನೀ
ರವ ಮೌನ ತಬ್ಬಿ,ಗಜಿಬಿಜಿ ಸಂಗೀತೋತ್ಸವ


ಅಲುಗಾಡದ ಎಲೆ ಗಿಡ ಮರ
ಗಳ ಸೀಳಿಕೊಂಡು
ತಂಪಾದ ಗಾಳಿ ನಿಡುಸುಯ್ದಂತೆ


ತುಟಿಪಿಟಕ್ಕೆನ್ನದೆ
ಘನಗಾಂಭೀರ್ಯದ ರಾಜಮುದ್ರೆ
ಹೊತ್ತ ನಿನ್ನ ನೋಡುತ್ತಲೇ ಸಾಗಿದ


ಕಿಕ್ಇರಿದ ಜನಸ್ತೋಮ
ರಾಜಹಂಸ,ಪುಷ್ಪಕ,ತ್ರಿಚಕ್ರ,ದ್ವಿಚಕ್ರ
ಅಂಬೇಡ್ಕರ್ ಬೀದಿಯುದ್ದಕೂ ಮೆರವಣಿಗೆ


ಅರೆಘಳಿಗೆ ಬಿಟ್ಟಕಣ್ಣುಬಾಯಿ
ಅಬ್ಬಾ!
ಮತ್ತದೇ
.ಗೊಂದಲ
.ಗದ್ದಲ
.ಚಡಪಡಿಕೆ

ಲೇಬಲ್‌ಗಳು: , , , ,

ಮಳೆ

ಮೂನ್ನೆಯಿಂದ ಸಹೃದಯರ
ಮಾತಿನಲ್ಲಿ ಒಂದೇ ಎಳೆ
ಬಿದ್ದೆದ್ದು ಸುರಿಯುತಿರುವ ಹುಚ್ಚು-ಮಳೆ


ನನ್ನ ಪೆಚ್ಚುಮನಸ್ಸಿಗೆ ಹೊಳೆದ
ಅಂಶವೊಂದೇ
'ಮಳೆಗೂ ಹುಚ್ಚೇ?!'


ಹುಚ್ಚಲ್ಲವದು,
ಹೀಗೇ ಸುರೀಬೇಕು ಅನ್ನೋ ಕಟ್ಟಳೆಗಳಿಲ್ಲದ,
ಇಷ್ಟೇ ಸುರೀಬೇಕು ಅನ್ನೋ ಆಡಂಬರವಿಲ್ಲದ
ಸ್ವೇಚ್ಛೆ


ಬರಗೆಟ್ಟ ಬದುಕಿನ ಹತಾಶಭಾವಕ್ಕೆ
ಕೊಡಲಿ-
ಪೆಟ್ಟು ಕೊಡಲಿ
ಅನ್ನೋ ಪ್ರಕೃತಿಯ ಬಂಡಾಯ

ಲೇಬಲ್‌ಗಳು: , ,

ಮರೆವು


ಕೆಲವರು ಯಾವಾಗಲೂ ಹೀಗೆ
ಮಾತು ತಮ್ಮ ಆಸ್ತಿ
ಅಂತಲೇ ನಂಬಿದವರು
ಅವಶ್ಯಕತೆ-ಅನವಶ್ಯಕತೆಯೆನ್ನದೆ
ಸದಾ ಮಾತನಾಡುವವರು
ಮೌನ ಮರೆತವರು


ಮತ್ತೆ ಕೆಲವರೂ ಅಷ್ಟೇ
ಯಾವಾಗಲೂ ಹೀಗೇ!
ಮಾತು ಅವರಿಗೂ ಆಸ್ತಿಯೇ
ಕರಗಬಹುದೆಂಬ ಭಯದಲ್ಲಿ
ಬಾಯೇ ಬಿಡದವರು
ಮಾತು ಮರೆತವರು!

ಲೇಬಲ್‌ಗಳು: , , ,

ಹೀಗೆರಡು ಕಿರುಗವಿತೆಗಳು...


ಸಂಜೆ ಆರರ ಸಮಯ
ಹಕ್ಕಿ ಹಿಂಡಿಗೆ ಗೂಡು ಸೇರುವ ತವಕ

ರೆಕ್ಕೆ ಬಲಿತ ಮರಿಹಕ್ಕಿಗೆ
ತನ್ನಮ್ಮನೊಡನೆ ತಾನೂ ಹಾರುವ ಪುಳಕ

ಸಾಕಿಸಲಹಿ ಹಾರಲು ಕಲಿಸಿ,ಕಲಿತ
ಹಕ್ಕಿ ಹಾಗೂ ಮರಿಯ ಜನುಮ ಸಾರ್ಥಕ

ಪಾರ್ಕಿನಲಿ ಕೂತು ಹಾರಿಹೋದ ಮರಿಯನ್ನೇ ದಿಟ್ಟಿಸುತ್ತಿದ್ದ
ಅಜ್ಜ-ಅಜ್ಜಿಯ ಮುಖದಲಿ ಮೂಡಿದ ಭಾವ ಮಾತ್ರ - ಪ್ರಶ್ನಾರ್ಥಕ!

* * * * * * * * * * * * * * * *

Chennaiನಲ್ಲಿ ಭಾರೀ ಮಳೆ
ಬೆಂಗಳೂರೇನೂ ಹೊರತಲ್ಲ
ಈ ಕಾಲದಲಿ ಮಳೆ,ಆಶ್ಚರ್ಯವೆ?

ಸಧ್ಯದ ಆರ್ಥಿಕ ಬಿಕ್ಕಟ್ಟಿನ ಈ ಪರಿಸ್ಥಿತಿಯಲ್ಲಿ
ನಮ್ಮೆಲ್ಲರಂತೆ ಪ್ರಕೃತಿಯೂ
Depressionಗೆ ಒಳಗಾಗಿದ್ದು ಸಹಜವೇ

ಲೇಬಲ್‌ಗಳು: , , ,

ಕಾರಣ

ಇರುಳಿಡೀ ನಿದ್ದೆಯಿಲ್ಲ,
ಪರದಾಟ
ಮಗ್ಗುಲು ಬದಲಿಸಿದರೂ
ಕಣ್ಣು ಕಚ್ಚದೆ-ತಿಣುಕಾಟ


ಮುಸುಕೆಳೆದರೆಚಣ,
ಕಾಲೆಡೆಗೆ ಒದ್ದುಕೊಂಡೆ ಮರುಕ್ಷಣ
ಕುಳಿರ್ಗಾಳಿಯ ಸ್ಪರ್ಶ ಚರಣಕೆ
ನಿಲ್ಲದ ಸಂಘರ್ಷ - ಮುಖಬಾಗಕೆ?


ಈ ಪರಿಯ ಒದ್ದಾಟ-ಎಳೆದಾಟಕೆ
ಕಾರಣ, ಆ ತುಂಡು ಕಂಬಳಿ
ಅಂತೆಯೇ,
ನಿನ್ನ-ನನ್ನ ಪ್ರೀತಿ ಕೂಡಾ!

ಲೇಬಲ್‌ಗಳು: , ,

ಆ ದಿನಗಳು....

ಸಿಡಿಲೊಡೆದು ಪಳೆಯುಳಿದ
ಇಟ್ಟಿಗೆಗೂಡಲೊಂದು
ಚಾ ದುಖಾನು


ಹೋದ ತಿಂಗಳ
ಪ್ರಜಾಮತದ ಮುಖಪುಟದಿ
ಸುಮಲತಾಳ ಹುಸಿನಗು


ಪಟ್ಟಿಗಾಜಿನ ಲೋಟದ ತಳದಲಿ
ನೀರ್ಕಾಪಿ,
ದವಡೆಯಾಡಿಸಲು ಒಣಕಲು ಬನ್ ಒಂದು


ಮನಸಿನಾಳದ ಕೊರಗು,ಲೋಕಾರೂಢಿ ಚಿಂತೆ
ಎಲ್ಲವೂ ಬ್ರಿಸ್ಟಲ್ ಸಿಗರೇಟಿನ
ಹೊಗೆಯಾಗಿ ಗಾಳಿಯಲಿ ಲೀನ


ಮೂಲೆಮೂಲೆಯ ಜನ್ಮ ಜಾಲಾಡಿ
ಮುದಿರೆಲೆಯ ಗತಿಕಾಣಿಸಿದ
ಉದಯವಾಣಿ ಪತ್ರಿಕೆಯೊಂದು


ಬೆಳಗಿಂದ ಕೂತು ತಲೆಕೆರೆದು ಕುರಮಾಡಿ ಮುಗಿಸಿದ
ಕಾಪಿ-ಬನ್ನು-ಇಡ್ಲಿ-ಮಸಾಲ್ ವಡೆ-ಚಿತ್ರಾನ್ನ-ಸಿಗರೇಟಿನ
ಒಟ್ಟು ಮೊತ್ತ ಇಪ್ಪತ್ತು ರುಪಾಯಿ!!


ಏನಾದರೇನು?
ಗೋರ್ಬಚೇವನಿಗಾಗಲೀ
ಬುಶ್ಶಪ್ಪನಿಗಾಗಲಿ ಮೋಕ್ಷವಿಲ್ಲ,
ಕುಂತಿ ಮಕ್ಕಳಿಗೆ ರಾಜ್ಯವಿಲ್ಲ!

ಲೇಬಲ್‌ಗಳು: , , ,

ಗಾಳಿಪಟ



ರಿ

ಸಿ
ಹಾ..........ರಿ............ಸಿ...........
ಎ ಳೆಎಎಎಎ ದಅಅಅಅಅ ಷ್ಟೂಊಊಊಊಊ
ಎತ್ತರೆತ್ತರಕ್ಕೆ ಹಾರುತ್ತಿದೆ
ಬಣ್ಣಮಾಸಿದ ನನ್ನ ಗಾಳಿಪಟ!

ಲೇಬಲ್‌ಗಳು: ,

ದುರಾದೃಷ್ಟ

ಗುಡಿಸಲು ತುಂಬಾ
ಮಸಿ ಹಿಡಿದು ಮುಕ್ಕಾದ
ಇಂಡಾಲಿಯಂ
ಪಾತ್ರೆಗಳ ಸದ್ದು-ಗದ್ದಲ


ಹಗಲಿಡೀ ನಿದ್ದೆಯಿಲ್ಲ
ಕುಡಿದ ನಶೆ : ಆರಕ್ಕೇರದು ಮೂರಕ್ಕಿಳಿಯದು
ಪಾಪ!
ಹರಕು ಚಾಪೆ ಕಾಲಿಗೂ ಸಾಲದು


ತವರ ಪಾಲಾದ ಹಿರಿಮಗಳ,
ಮೇಜುವಾನಿ ಮಾಡುವ ತಾಯಿಯ
ಜೋಡಿ
ಎಕ್ಕಡಕ್ಕೆ ಚುಚ್ಚಿಕೊಂಡ ಮೊಂಡು ಮೊಳೆ!


ಮೂಲೆಸೇರಿ ಹೇನು-ಸೀರು ಕುಕ್ಕುವ ನೆಪದಿ
ಕಂದಮ್ಮಗಳ ಮೇಲೆ ತನ್ನೆಲ್ಲ
ಕೋಪ-ತಾಪ
ತೀರಿಸಿಕೊಳ್ಳುವ ಗಂಡ ಸತ್ತ-ಹಿರಿಸೊಸೆ


ಮಾತೆತ್ತಿದರೆ ಸಾಕು
ಸೋರುವ ಮೂಗನೂ ಸೀಟದೆ
ಆಕಾಶ-ಭೂಮಿ
ಒಂದು ಮಾಡುವ ಮೊಮ್ಮಕ್ಕಳ ಹಿಂಡು!


ಗುಡ್ಲು ತೆಗೆದು ಹೊರಗೆ ಬಿಟ್ಟ ಕೋಳಿ ಪಿಳ್ಳೆಗಳೂ,
ಮೂಲೆ ಸೇರಿ ಬೂದಿಬಿಸಿಗೆ ಮೈಯೊಡ್ಡಿ ಮಲಗಿದ್ದ
ಮುದಿನಾಯಿ
ಹತ್ತದು ಹರಿಯದು;


ದಿನದೂಡಿ,ಸಂಜೆ ಮಾಡಿ
ಅರವತ್ತರೆರಡಷ್ಟರನ್ನು ಕಣ್ಣು ಕಿರಿದುಮಾಡಿ
ನೇರ
ಗಂಟಲಿಗೆ ಸುರಿದುಕೊಂಡು ಕೆಲಸಕ್ಕೆ ಬಂದಾಯ್ತು


ಮಫ್ಲರ್ ಸುತ್ತಿದ್ದ ವಾಚ್‍ಮನ್ ರಂಗಯ್ಯನಿಗೆ
ಇಂದೇ ಅತಿನಿದ್ದೆ,ಕನ್ನ ಕೊರೆದು ಮನೆ ದೋಚಿದರೂ
ಕಣ್ಣು
ಬಿಡಲಾಗದಷ್ಟು,ಸದ್ದಾದರೂ ಕೇಳಿಸದಷ್ಟು!

ಲೇಬಲ್‌ಗಳು: , ,

ಕರುಣೆ

ಬಿಡದೆ ಸುರಿಯುತಿರುವ ಜಡಿ ಮಳೆ
ಮೋಡ ಮುಸುಕಿದ ವಾತಾವರಣ;
ಗೂಡಿಗೆ ಹೊರಟಿದ್ದ ಹಕ್ಕಿಗಳಾ ಹಿಂಡೊಂದು
ಕೊಂಬೆಯೊಂದರ ಮೇಲೆ ಕೂತು
ರೆಕ್ಕೆ ಬಡಿದು ಪುಕ್ಕ ಒಣಗಿಸುತಿವೆ


ಸುತ್ತಲಿನ ಗಿಡ-ಮರ-ಪೊದೆಗಳು
ಮಳೆನೀರಲಿ ಮಿಂದು ಒದ್ದೆ-ಮುದ್ದೆಯಾಗಿ
ಹಸಿರಿನಿಂದ ಕಂಗೊಳಿಸುತಿರೆ
ಹಕ್ಕಿ ಹಿಂಡು ಕೂತ ಆ ಒಣ-ಬೋಳು ಮರ
ಅಯ್ಯೋ ಪಾಪ, ಸತ್ತು ಹೋಗಿ ನೆಟ್ಟಗೆ ನಿಂತಿದೆ!

ಲೇಬಲ್‌ಗಳು: , ,

ಸಿಹಿ-ಕಹಿ

ಕನ್ನಡದ ಕ್ಲಾಸಿನಲ್ಲಿ ಕದ್ದು-ಮುಚ್ಚಿ
ಬೆಲ್ಲದ ಸವಿ ಸವಿಯುವಾಗ ಸಿಕ್ಕಿಬಿದ್ದು
ಬೆಲ್ಲಾದ ನಂತರವೂ
ಬೆತ್ತಗಳ ಕೆಳಗೆ ಬೆತ್ತಲಾಗುವ ಪುಟ್ಟ ಮನಸು


ಮುಲುಗುಡುವ ಮುಂಗೈ-ಬೆರಳು
ಅದುಮಿಟ್ಟ ಕಣ್ಣ ಕೋಡಿ
ಒತ್ತಿ ಹಿಡಿದ ಯಾತನೆಯ ಕೂಗು
ಬೆಲ್ಲದ ಸಿಹಿಯನ್ನೂ ಮರೆಸುವಂತಹ
ಕಹಿ ನೆನಪುಗಳು!

ಲೇಬಲ್‌ಗಳು: , , ,

ನಾಳೆ

ನೆನ್ನೆಯ ನಾಳೆಯೊಂದು ಯೋಚಿಸಿತು
ಮೊನ್ನಿನ ನಾಳೆ ಹೀಗೆ ಮಾಡಿದ್ದರೆ
ನಾಳೆಗಳ ನೆನ್ನೆಗೆ ಈ ಗತಿ ಬರುತ್ತಿರಲಿಲ್ಲವೇನೋ!?
ಆದರೆ,
ನೆನ್ನೆಗೂ ನೆನ್ನೆಗಳಿದ್ದುದ
ಏಕೆ ಮರೆತುಹೋಯಿತೋ!?

ಇದಕ್ಕುತ್ತರವಾಗಿ ಎಸ್ಸೆಮ್ಮೆಸ್ ಮೂಲಕ ಗೆಳೆಯ ಸಂತೋಷ ಕಳಿಸಿದ ನಾಕು ಸಾಲುಗಳು ಹೀಗಿವೆ:

ಇಂದು
ನಾಳೆಯ ನೆನ್ನೆಯೊಂದು
ಯೋಚಿಸಿದ್ದರೆ ನೆನ್ನೆಯ ನಾಳೆಯ ಬಗ್ಗೆ
ಪರಿತಪಿಸಬೇಕಾಗುತ್ತಿರಲಿಲ್ಲವೇನೋ ಹೀಗೆ
ನೆನ್ನೆ ನಾಳೆಗಳ ಮಧ್ಯೆ;
ಆದರೇನು ಮರೆತಿಹೆವೆಲ್ಲ
ನೆನ್ನೆಯ ನಾಳೆಯಲಿ
ನಾಳೆಯ ನೆನ್ನೆಯಲಿ
ಬದುಕುವುದ ನಾವು!

--ಸಂK

ಲೇಬಲ್‌ಗಳು: , , , ,

ವಿಪರ್ಯಾಸ

ಸರಿಯಿಲ್ಲ...ಸರಿಯಿಲ್ಲ...ಸರಿಯಿಲ್ಲ...
ದೂರವಾಣಿ ಸಿಕ್ಕುತ್ತಿಲ್ಲ...
ಕಾಗದಗಳು ತಲುಪುವುದೇ ಇಲ್ಲ...

ಎರಡು ತಿಂಗಳಿನಿಂದ ಅಪ್ಪ ಅಮ್ಮನ ಕೂಡ
ನಗುನಗುತ ಮಾತನಾಡಿದ ನೆನಪೇ ಇಲ್ಲ
ಸಂಪರ್ಕದ ಹಾದಿ ಸುಗಮವಾಗಿರಬೇಕಲ್ಲ!!

ಅಪ್ಪ-ಅಮ್ಮನ ಪ್ರೀತಿಯ ಮಾತುಗಳಿಂದ
ವಂಚಿತರಾದ ಮಕ್ಕಳೆಲ್ಲ
ಅದೇ ಊರಿನ ವೃದ್ಧಾಶ್ರಮದ ವಿರುದ್ಧ
ದಾವೆ ಹೂಡಿದ್ದಾರಂತಲ್ಲ!!!

ಲೇಬಲ್‌ಗಳು: ,

ಇಂದು

ಬೆನ್ನಮೇಲೆ ಹೊತ್ತ
ನೆನ್ನೆಗಳ ಮೂಟೆಯನು
ಅರೆಘಳಿಗೆ ಕೆಳಗಿಳಿಸಿ

ನಾಳೆಗಳ ದಿಗಂತದೆಡೆಗೆ
ಕಿರುಗಣ್ಣಿನಲಿ ನೋಡಲು
ತೆಗೆದುಕೊಂಡ ಅಲ್ಪ-ವಿರಾಮ!!

ಲೇಬಲ್‌ಗಳು: , ,

ವಾಸ್ತವ

ನೆನಪುಗಳನ್ನೇ ಮೆಲುಕು ಹಾಕುತ್ತ
ಒಂದು ಕವನ ಲೆಕ್ಕಕಿರಲೆಂದು
ಗೀಚಿದ ಹಾಳೆಯನ್ನೇ ನಿನ್ನ ಕೈಗಿತ್ತೆ

ನೀನೋ, ಅದು ನಿನಗಾಗಿಯೇ ಬರೆದ,
ನಿನ್ನದೇ ಕವನವೆಂಬಂತೆ
ಎದೆಗೊತ್ತಿಕೊಂಡು ಕಣ್ಮುಚ್ಚಿ ಒಮ್ಮೆ
ನಿಟ್ಟುಸಿರುಗೈದೆ!

ಆ ನಿನ್ನ ಬಿಸಿಯುಸಿರು ನನಗೂ ತಟ್ಟಿ,
ಕಣ್ಣಂಚಿನಲ್ಲಿ ಕಾದು ಕುಳಿತ ಕಂಬನಿಯು
ನಿನ್ನಾ ಕೆನ್ನೆಯ ಸವರಿ,ಗಲ್ಲದ ತುದಿಗೆ ಬರುವಷ್ಟರಲ್ಲಿ
ಸಪ್ತಸಾಗರದಾಚೆಗಿನ ಹೊಸ ಬದುಕಿನೆಡೆಗೆ
ನನ್ನ ಪಯಣ ಶುರುವಾಗಿತ್ತು!

ಲೇಬಲ್‌ಗಳು:

ಪ್ರಸ್ತಾಪ

ಭಾವಬಿಂದುಗಳೊಡನೆ ಚುಕ್ಕಿಯಾಟ
ನಾಲ್ಕು ಗೀಟುಗಳೊಂದಿಗೆ
ಮನೆಯೊಂದರನಾವರಣ
ಹೆಸರಿನಕ್ಷರದೊಡನೆ ನಾಮಕರಣ!

ಸರದಿಯಂತೆ ಆಡಬೇಕಿಲ್ಲಿ ನಾನೊಮ್ಮೆ ನೀನೊಮ್ಮೆ,
ಆದ್ಯತೆ ಆವಶ್ಯಕತೆಗಳಿಗನುಸಾರ
ಹೇಗಾದರೂ ಸರಿಯೆ, ಎಷ್ಟಾದರೂ ಸರಿಯೆ
ಗೀಟೆಳೆದು ಮನೆತುಂಬಿಸಿಕೊಂಡರಾಯ್ತು

ಜೇಡ ಕಟ್ಟಿದ ಮೂಲೆಯಲ್ಲಿಷ್ಟು
ನೆನಪಿಗೇ ಬಾರದ ಹೆಸರುಳ್ಳ ಮನೆಗಳು
ಮತ್ತೆ ಅಲ್ಲಲ್ಲಿ ಅಷ್ಟಿಷ್ಟು ಗುರುತು ಪರಿಚಯದ
ನೆಂಟರಿಷ್ಟರ ಕುರುಹುಗಳು

ಕಡೇ ಸಾಲಿನ ಕೊನೆಯಲ್ಲೊಂದು,
ಮೂರು ಗೀಟು ಬಿದ್ದ ಜಾಗವೊಂದಿದೆ
ನಾಲ್ಕನೆಯದನ್ನು ನಿನ್ನ ಕೈಯಾರೆ ನೀನೇ
ಎಳೆದು ನಿನ್ನ ಮನೆಯಾಗಿಸಿಕೊಳ್ಳೇ ಗೆಳತಿ...

ಕನವರಿಕೆ

ಡಾವಿಂಚಿ ಚಿತ್ರಿಸಿದ
ಮೊನಾಲಿಸಳ ನಗೆ,
ರವಿವರ್ಮ ಬರೆದ
ಹೆಂಗಳೆಯರ ಹಾಗೆ

ನನ್ನವಳ ಮುಖಾರವಿಂದವನೂ-
ಚಿತ್ರಿಸಿ,ಬಣ್ಣಗಳಿಂದ ಮೇಳೈಸಿ
ಅದಕ್ಕೊಪ್ಪುವ ಚಿನ್ನದ ಬಣ್ಣದ
ಚೌಕಟ್ಟೊಂದನ್ನು ಹುಡುಕಿ ತಂದೆ

ಮನದಾಳದ ಮನೆಯ
ಸ್ಮೃತಿಪಟಲದ ಗೋಡೆಗೆ
ತಗುಲಿ ಹಾಕೋಣವೆಂದರೆ
ನೆನಪುಗಳ ಮೊಳೆಯೊಂದೂ ಇರಲಿಲ್ಲ!

ಲೇಬಲ್‌ಗಳು: , , ,

ದಿನಚರಿ

ಸೂರ್ಯ ಹುಟ್ಟೇ ಇಲ್ಲವಿನ್ನೂ ಛಳಿಗಾಲದ ಮುಂಜಾವು
ಕಾಸಿಟ್ಟ ಕಾಫಿ ಹೀರಿ ಪತ್ರಿಕೆಯ ಮಡಚಿ ಮುದುರಿ
ಅಗ್ರಹಾರ ದಾಟಿ ನಡೆದು ಝಾನ್ಸಿ ರಸ್ತೆಯನ್ನೂ ಮೀರಿ
ರೇಲ್ವೇ ಸ್ಟೇಷನ್ ಸೇರಬೇಕವನು, ಅಲ್ಲಾಹು ಅಕ್ಬರ್ ಕೂಗುತಿರೆ

ಕಡೇ ಬೆಲ್ಲಾಗಿದೆ..ಜನರೆಲ್ಲ ಬಂದಾಗಿದೆ
ಹೊರಟು ನಿಂತಿದೆ ಐದು ಐವತ್ತರ ಪುಶ್-ಪುಲ್ಲು
ಕಡೇ ಬೋಗಿಯೇ ಗತಿಯಿವನಿಗೆ ಸೀಟಿಗೇನು ಕಷ್ಟವಲ್ಲ
ಎಂದಿನಂತೇ ಕ್ಯಾಂಟೀನ್ ಇಡ್ಲಿ ಹಬೆಯಾಡುತಿದೆ

ಬಿಸಿಯನ್ನದೂಟ ಹೊತ್ತ ಮೈಸೂರ್ ಟಾರ್ಪಾಲಿನ ಚೀಲವನು
ಪಟ್ಟಣದ ಶ್ರೀರಂಗನಂತೆ ತಲೆದಿಂಬಾಗಿಸಿಕೊಂಡು
ಕಾಲು ಚಾಚಿ ಸೀಟಿನುದ್ದಕೂ ಪಶ್ಚಿಮವಾಹಿನಿ ದಾಟುವ ಮೊದಲೇ
ಗೊರಕೆಯೊಡನೆ ನೆಮ್ಮದಿಯ ನಿದ್ದೆ...ಮಂಡ್ಯದವರೆಗೂ!

ಚಾಯ್ ಕಾಫಿ ಟೀ ವಡೇ ವಡೇ ಬಿಸಿ ಬಿಸಿ ಮದ್ದೂರ್ ವಡೇ
ಎಲ್ಲರಂತೆ ಎದ್ದು ಕಣ್ಣುಜ್ಜಿಕೊಂಡು
ಮದ್ದೂರಿನಲ್ಲಿಷ್ಟು ಹೊಟ್ಟೆಪೂಜೆ
ಕಟ್ಟಿಟ್ಟ ಬುತ್ತಿಯ ಮೊದಲ ಕಂತು

ಅರೆ! ಖಾಲಿಯಿದ್ದ ಸೀಟುಗಳೆಲ್ಲ ಭರ್ತಿ!
ಹನಕೆರೆ,ಚನ್ನಪಟ್ಟಣ,ರಾಮನಗರದ
ಹೊತ್ತಿಗೆ ತುಂಬಿದ ಬಸುರಿಯಂತಾಗುವುದು
ಸಂಧಿಯಲ್ಲೆಲ್ಲೋ ಹಸಿದ ಮಗುವಿನಳಲು

ಮುಂದಿನ ಮೂರು ಬೋಗಿಯಲ್ಲಿಷ್ಟು
ಜೂಜಾಡುವ ಜಾಯಮಾನದವರು
ಮಧ್ಯದರಲ್ಲಿ ನರೆತ ಕೂದಲಿನವರು
ಸಂಸಾರಸ್ಥರು, ವಿದ್ಯಾರ್ಥಿಗಳು

ಕಡೆ ಕಡೆಗೆ ಲಲ್ಲೆಗರೆಯುವ ಹೆಣ್ಣು ಮಕ್ಕಳು
ಡಬ್ಬಿಯಲ್ಲಿಷ್ಟು ಊಟಕ್ಕೆಂದು ಮೊಸರನ್ನ-ಉಪ್ಪಿನಕಾಯಿ-ಚಿತ್ರಾನ್ನ
ಹಿಂದೆ ಮುಂದೆ ಹಲ್ಕಿರಿಯುವ ಹದಿ ಹುಡುಗರು
ಸಾಲ ಪಡೆದ ಕೆಂಪು ಬಾಚಣಿಗೆ, ಕೊಳಕು ಕಿಂಡಿ ಹಲ್ಲು

ಸಣ್ಣ ಮಾತು ದೊಡ್ಡ ನಗು ಇಷ್ಟು ಹರಟೆ
ಇವನ ಗೇಲಿ ಅವಳ ಸಿಡುಕು, ಚಕ್ಕಲಿ-ಮುರುಕು
ಮೇಲೆ ಕೂತು ತೂಕಡಿಸುವವರಿಗೆ ಬಾರದ ನಿದ್ದೆಯ ಬೇಟೆ
ವಾಸನೆ ಮೂಲೆಯಲಿ ಟಿಕೇಟಿಲ್ಲದವರು, ಚಿಂದಿ-ಹರುಕು

ಹೆಜ್ಜಾಲ ದಾಟಿ ಬಿಡದಿ ಮುಟ್ಟಿತು, ತೂಕಡಿಸಿ
ಕಿಟಕಿಯ ಸರಳಿಗೆ ತಲೆ ಬಡಿಸಿಕೊಂಡು
ಎದ್ದು ಆಕಳಿಸಿ ಮೈ ಮುರಿದು ಕಣ್ಣಗಳಿಸಿದನೊಮ್ಮೆ
ಕಿಟಕಿಯಾಚೆಯ ಬದುಕು ನಾಗಾಲೋಟದಲಿ ಓಡುತಿದೆ

ಜ್ಞಾನಭಾರತಿ ದಾಟಿಯಾಯಿತು...ಶಿಳ್ಳೆ ಕೂಗಿದ್ದಾಯಿತು
ನಾಯಂಡಹಳ್ಳಿಯಾಗಮನ; ಸಾವರಿಸಿಕೊಂಡು ಇಳಿದು
ರೈಲನ್ನು ಹಗುರಗೊಳಿಸಿ ತಲೆಬಾಗಿಸಿ ಚೀಲವಿಡಿದು
ಸರಸರನೆ ಒಟ್ಟಾಗಿ ನಡೆದೇಬಿಡುವರು ಹಿಂದಿರುಗಿ ನೋಡದೆ!

ಲೇಬಲ್‌ಗಳು: ,

ಮಾತೇ ಮುತ್ತು....ಮೌನ ಬಂಗಾರ

ಮಾತಿಗಿಲ್ಲಿ ಬಡತನವಿಲ್ಲ
ಕೇಳುವ ಕಿವಿಗಳೆರಡಿದ್ದರಾಯ್ತು
ಮಾತನಾಡುವವರಿಗೇಕೆ ಚೌಕಾಸಿ
ಕಾಸಿಗೊಬ್ಬ ಕೊಸರಿಗೊಬ್ಬ!

ಸರಳ-ನೇರ,ಕಟುಸತ್ಯ,ಮಧುರ
ಲೋಕಾರೂಢಿ,ದೇಶಾವರಿ
ಆಶ್ವಾಸನೆ,(ಬಿಟ್ಟಿ) ಉಪದೇಶ
ಹತ್ತು ಹಲವು ರೂಪವದಕೆ

ಮಾತು ಆಡಿದರೇ ಹೋಯ್ತು
ಮುತ್ತು ಒಡೆದರೇ ಹೋಯ್ತು
ಮೂಕಪ್ರೇಕ್ಷಕರಿಗೇನು ಬಿಡಿ
ಕಿಲುಬುಕಾಸಿಗೂ ಇಲ್ಲವಿಲ್ಲಿ ಕುತ್ತು

ಅಲ್ಲಿಗೀ ಸಮೀಕರಣ ಸರಿಯೇ ಬಿಡಿ
ಮಾತು ಮುತ್ತಾದ ಮೇಲೆ
ಮೌನ ಮುತ್ತುಗಳ ಬಿಗಿದಪ್ಪಿ
ಬೆಲೆ ತಂದುಕೊಡುವ ಬಂಗಾರ!

ಬದಲಾವಣೆ

ಇಷ್ಟು ದಿನವೂ
ತಿಂದುಂಡು ಅಂಡಲೆಯುತಿದ್ದ
ಹೆಸರಿಲ್ಲದ ಗ್ರಹದಂತೆ
ನನ್ನದೇ ಆದ ಕಕ್ಷೆ ನನಗೆ

ಈಗೇನು ಬದಲಾವಣೆ?

ಸೂರ್ಯದೇವನಂಥ ಅಪ್ಪ
ಕ್ಷಮಯಾ ಧರಿತ್ರಿ ಅಮ್ಮ
ಚಂದಿರನಂಥ ತಂಗಿ
ಒಟ್ಟಿಗೆ ಎರಡನೇ ಹೊಸಮನೆಯಲ್ಲಿರುವಾಗ

ನಾನೂ ಹತ್ತಿರದೊಂದು
ಕಕ್ಷೆಗೆ ಬರಬೇಕು
'ಮಂಗ'ಳನಾಗದಿದ್ದರೂ ಸರಿಯೆ
ಸೌರವ್ಯೂಹದೊಳಗೆ
ಶನಿಯಾದರೂ ಆಗಲೇಬೇಕು! [:p]

[ಬೆಂಗಳೂರಿನಲ್ಲಿ ಹೊಸಮನೆಯೊಂದನ್ನು ಬಾಡಿಗೆಗೆ ಪಡೆದು ಅಪ್ಪ-ಅಮ್ಮ ಎಲ್ಲರೂ ಇಲ್ಲಿಗೇ Shift ಆದ ಹಿನ್ನೆಲೆಯಲ್ಲಿ ತೋಚಿದ್ದನ್ನ ಇಲ್ಲಿ ಗೀಚಿದ್ದೇನಷ್ಟೇ! :)]

ಪ್ರಶ್ನೆ - '?'

ನಾನೇಕೆ ಬರೆಯಬೇಕು? ನಾನೇಕೆ ಕವಿಯಾಗಬೇಕು?

ಕೋಣೆಯ ಮೂಲೆಯಲಿ ಹಾಸಿದ ಹಾಸಿಗೆಯೊಂದು
ಮನಸಿನ ಮೂಲೆಯಲ್ಲಿ ಹರಡಿದ ನೂರು ಯೋಚನೆಗಳು
ಮುಚ್ಚಿದ ಕದ, ಅರೆತೆರೆದ ಕಿಟಕಿ, ಅರ್ಧ ಬಾಟಲಿ ನೀರು

ಸುಂಯ್‍ಗುಟ್ಟು ತೀಡುವ ತಂಗಾಳಿಗೆ ಮೈಯೊಡ್ಡಿ
ಹಾರಾಡುತ ಮೊಗವ ಸವರುವ ಈ ನೀಲಿ ಪರದೆ
ಕಣ್ಮುಚ್ಚಿ ಕಾದಾಡಿದರೂ ನಿದಿರೆ ಬಾರದೆ...

ಗೋಡೆಯಲಿ ನೆಲೆಬಿಟ್ಟ ತಾತ ತಂದ ಗಡಿಯಾರ
ತೂಗುಬಿದ್ದ ಕ್ಯಾಲೆಂಡರ್, ವಾಲ್‍ಪ್ಲೇಟುಗಳು
ಹಿಂದೆ ಹಲ್ಲಿ ಜೇಡಗಳ ಹೆಜ್ಜೆ ಗುರುತು

ಕಿಟಕಿಯಾಚೆಗಿನ ತೆಂಗಿನ ಮರದಲಿ ಗರಿಗಳ ನಲ್ಮೆಯ ಪಿಸುಮಾತು
ಚದುರಿದ ಮೋಡಗಳ ನಡು ನಡುವೆ ಕಣ್ಣಾ-ಮುಚ್ಚಾಲೆಯಾಡುವ
ತುಂಟ ಚಂದಿರ; ಮಿನುಗುವ ತಾರೆಗಳು

ಎಲ್ಲೋ ದೂರದಲ್ಲಿ ಹರಿವ ನೀರಿನ ಜುಳುಜುಳು ಸದ್ದು
ಚರಂಡಿಯಾದ್ದರಿಂದಲೋ ಏನೋ ದುರ್ವಾಸನೆಯ ಘಮಲು
ಕಿವಿದುಂಬಿ ಗುಂಯ್‍ಗುಡುವ ರಕ್ತಪಿಪಾಸಿ ಸೊಳ್ಳೆಗಳು

ಕೇಳುತ ಗುನುಗುನಿಸುವಂತೆ ಮಾಡುವ
ಹತ್ತು ಹಲವಾರು ಸ್ಟೇಶನ್ನುಗಳ ರೇಡಿಯೋ ಹಾಡುಗಳು
ಎಡೆಬಿಡದೆ ಬರುವ ಯೋಚನೆಗಳಿಗೆ ಇವು ಜಾಹೀರಾತುಗಳು

ಇಷ್ಟೆಲ್ಲವೂ ಕವನಕ್ಕೆ ಸ್ಫೂರ್ತಿಯಾಗುವ ವಸ್ತುವಾಗುವಾಗ,
ವಸ್ತು-ವಿಷಯ-ವಸ್ತುಸ್ಥಿತಿಗಳೂ ಪ್ರೇರಣೆಯಾಗಿ ಕಣ್ಮುಂದಿರುವಾಗ,
ನಾನೇಕೆ ಬರೆಯಬಾರದು? ಹೌದು... ನಾನೇಕೆ ಕವಿಯಾಗಬಾರದು??...

ಮೂಕಸಾಕ್ಷಿ

ಉಕ್ಕಿ ಉಕ್ಕಿ ಬಂದು ದಡವನ್ನು ಮುತ್ತಿಕ್ಕುತ,
ಅವಿರತವಾಗಿ ಬೇಸರವಿಲ್ಲದೇ ಏರಿಳಿಯುವ ಈ ಸಾಗರದಲೆಗಳು

ಸಾಗರದಿಂದ ಆವಿಯಾದ ಜಲವೆಲ್ಲವೂ ಮೋಡವಾಗಿ,
ಕರಗಿ ಸುರಿವಾಗ ಭೂಮಿಗೇ ಸಮಾಧಾನ ಹೇಳುವ ಈ ಮಳೆಯು

ಬರಡು ನೆಲ ಧೂಳೆಂದು ಗೊಣಗಾಡುವಾಗ,
ಇಳೆಗೆ ಮಳೆ ಬಿದ್ದ ಕೂಡಲೇ ಘಮಗುಡುವ ಈ ಒಣ ಭೂಮಿಯು

ಒಣ ಭೂಮಿಗೆ ನೀರೆರೆದು ಬೀಜ ಬಿತ್ತಾಗ,
ಬೇರು-ಬಿಳಲ ಚಾಚಿ ಭೂಮಿಯನೇ ಬಾಚಿ ತಬ್ಬುವ ಈ ಮರವು

ಮರದಾಸರೆ ಬಯಸಿ ಬಂದ ಸಕಲ ಜೀವಸಂಕುಲಗಳಿಗೂ,
ಸದಾ ಸ್ವಾಗತ ಕೋರುವ ಹಸಿರೆಲೆ-ಹಣ್ಣಿನ ಈ ಗೂಡುಗಳು

ಅಮ್ಮನ ಗೂಡೊಳಗೆ ಬೆಚ್ಚಗೆ ಮಲಗಿದ್ದು,
ಹುಟ್ಟಿದಾಕ್ಷಣ ಕಿರ್ರ್ ಎಂದು ಕೂಗಿ ಅಳುವ ಹಸನ್ಮುಖಿ ಹಸುಳೆಯು

ಸೃಷ್ಟಿಯಲ್ಲಡಗಿರುವ ಈ ದಿವ್ಯ-
ಮಾಂತ್ರಿಕ ಶಕ್ತಿಗೆ ಮೂಕಸಾಕ್ಷಿಗಳು

ಮೌನಿ

ಸ್ನೇಹಿತನೊಬ್ಬನು ಇತ್ತೀಚೆಗೆ ಭಾರತಕ್ಕೆ ವಾಪಸ್ಸಾದ. ಅವನ ಬೀಳ್ಕೊಡುಗೆಗಾಗಿ ಈ ನಾಕು ಸಾಲುಗಳು

ಮೌನಿ
ಜಗದ ಜವಾಬ್ದಾರಿಗಳೆಲ್ಲ ತನ್ನ ತೋಳ ಮೇಲೆಂಬಂತೆ
ಸುರು-ಸುರುಳಿಯಾಗಿ ತೇಲಿಬಿಟ್ಟಾಗ
Marlboro Redನ ಹೊಗೆ ಗಾಳಿಯಲ್ಲಿ ಲೀನ
-ಹೆಚ್ಚು ಮಾತಿಲ್ಲದ ಮೌನಿ

ಅಮಾವಾಸ್ಯೆಗೊಮ್ಮೆ ಹುಣ್ಣಿಮೆಗೊಮ್ಮೆ
ತುಟಿಯಂಚಲಿ ನಗು ಕಂಡರದೇ
ಗೆಳೆಯ ಬಳಗಕ್ಕೆಲ ಪರಮಾಶ್ಚರ್ಯ
- ಗಟ್ಟಿಯಾಗೊಮ್ಮೆ ನಕ್ಕುಬಿಡು ಮೌನಿ

ನೀರು(!?) 'ಕುಡಿ'ದಷ್ಟೆ ಸುಲಭ,
ಕುಡುಕರನೂ ನಾಚಿಸಿ ನೀರಾಗಿಸುವವ
ಸಲೀಸಾಗಿ ಪೀಪಾಯಿಗಳನೇ ಸದ್ದಿಲ್ಲದೇ ಕುಡಿದೇಳುವವ
ಮನಪೂರ ಮಾತಾಡಿಬಿಡು ಮೌನಿ

ಬೀರುವಿನಲ್ಲಿ ಮಡಿಚಿಟ್ಟ ಜೀನ್ಸುಗಳೆರಡು
ನುಸಿಗುಳಿಗೆಯೊಡನೆ ಬಾಳುವ ಕೋಟುಗಳಿನ್ನೆರಡು
ಸದಾ Formalsನಲ್ಲೆ ನಲಿಯುವವ
ಮೊನ್ನೆ ಶುರುವಾದ ಛಳಿಗೂ ಛಳಿಯಾಗಿರಬಹುದೇನೋ
ಇವನನ್ನಲ್ಲಾಡಿಸಲಾಗಲಿಲ್ಲ - ಒಮ್ಮೆ ಮೈಪೂರ ಕೊಡವಿ ನಡುಗಿಬಿಡು ಮೌನಿ

ಎನಾದರಾಗಲಿ, ಬರುವುದೆಲ್ಲ ಬರಲಿ
ಭವಬಂಧನದ ಭಾರವ ಕೆಳಗಿಳಿಸು ಕೊಂಚ
ಹೊಗೆ-'ಕುಡಿ'ಯುವುದ ಕಡಿಮೆ ಮಾಡಿ
ನಕ್ಕು ನಲಿದಾಡು ಆಗೊಮ್ಮೆ ಈಗೊಮ್ಮೆ
ಆಗದಿದ್ದರೇನಾಯ್ತು ಬಿಡು – ನೀ ಬದಲಾಗದಿರು ಮೌನಿ!

ಏಕತಾನತೆ

ಹಿಂದೊಮ್ಮೆ ಮುದ ನೀಡುತ್ತಿದ್ದ
ಅನನ್ಯ ಅನುಭವಗಳೆಲ್ಲವೂ
ಇಂದೇಕೋ ಜೀವವಿಲ್ಲದ
ಯಾಂತ್ರಿಕ ನಡವಳಿಕೆಗಳಾಗಿವೆ

ಆಸರೆಗಾಗಿ ಓಡೋಡಿ ಬಂದು
ದಡವನ್ನು ಬಾಚಿ ತಬ್ಬುತ್ತಿದ್ದಲೆಗಳೆಲ್ಲವೂ
ಕಾರ್ಯನಿರತ ಕಾರ್ಮಿಕರಂತೆ ಬಂದು
ಮರಳಿನ ಮೇಲೆ 'ಸಹಿ'ಸಿ ಹೋಗುತ್ತಿವೆ

ಸಂಜೆಮೊಗ್ಗಿನ ಕಂಪನ್ನು ತೀಡಿ ತಂದೊಡ್ಡುತ್ತಿದ್ದ ತಂಗಾಳಿಯೂ
ನಿವೃತ್ತ ಓಲೆಕಾರನಂತೆ ಅರೆ-ಬೇಸರದಿಂದ
ಹೊಗೆ-ತಿಪ್ಪೆ ಹೊಂಗೆ-ಮಲ್ಲಿಗೆಗಳ ಬೇಧಭಾವವಿಲ್ಲದೆ
ಕರ್ತವ್ಯ ನಿರತವಾದಂತೆ ಭಾಸವಾಗುತ್ತಿದೆ

ಲಾಲ್?ಬಾಗಿನ ಮರಮರಗಳಿಂದ ಉದುರುವ
ಸುಗಂಧಭರಿತ ಹೂವುಗಳೂ,ಬಣ್ಣಬಣ್ಣದ ಎಲೆಗಳೂ
ಮುಂಜಾನೆ ಮಬ್ಬಿನಲ್ಲಿ ಎದ್ದೋಡುವವರ ಕಾಲ್ತುಳಿತಕ್ಕೆ ಸಿಕ್ಕು
ಹಾದಿಬದಿಯಲಿ ಗುಡ್ಡೆಹಾಕಿದ ಗೊಬ್ಬರವಾಗಿವೆ

ಅದೇ ಗಾಳಿ ಅದೇ ನೀರು ಅದೇ ಊಟ ಅದೇ ಕೆಲಸ
ಎಲ್ಲವೂ ಅದದೇ ಅನ್ನುವ ಏಕತಾನತೆಯ ಉನ್ಮತ್ತ ಭಾವ
ಮನದೊಳಗಿನ ಭಾವನೆಗಳನೂ ಒಂದೇ ತೆರನಾಗಿಸಿ
ಭಾವನೆಗಳ ಸಾವಿಗಂಜುವ ಭಾವುಕನನ್ನಾಗಿಸಿದೆ

ಹಳ್ಳಿ ನೆನಪು

ಹಳೆಯ ತೊಟ್ಟಿ ಮನೆ-
ಹೆಂಚುಗಳ ಸೀಳಿ ಸದ್ದಿಲ್ಲದೇ
ಒಳ ಬಂದ ಎಳೆ ಸೂರ್ಯನ
ಬಿಸಿಲ್ಗೋಲುಗಳ ನಡು-ನಡುವೆ

ಹೆಜ್ಜೆ ಸಪ್ಪಳ ಕೇಳದಂತೆ
ಮಡಿಕೋಲ ಹಿಂದಿನಿಂದ
ಬಾಲಮುದುಡಿ ಒಳಬಂದ
ಕದ್ದು ಹಾಲ ಕುಡಿವ ಮುದ್ದಿನ ಬೆಕ್ಕು

ಅಲ್ಲಲ್ಲಿ ಅಷ್ಟಿಷ್ಟು ಹರಡಿ ಹೋಗಿದ್ದ
ಅಕ್ಕಿ-ಗೋಧಿ ಕಾಳುಗಳ
ಹೆಕ್ಕಿ ಹೆಕ್ಕಿ ಹೊಟ್ಟೆ ತುಂಬಿಸಿಕೊಳ್ಳುವ
ಆ ಗುಬ್ಬಿ ಮರಿಗಳ ಹಿಂಡು!

ಗಂಗೆ-ಗೌರಿ, ಜೊತೆಗೆ
ಗದ್ದೆಯೊಡೆಯ ಬಸವ
ಮಿಕ್ಕ ಮುದ್ದೆಯುಣುವ ಚೆನ್ನ
ಪಕ್ಕ ರಾತ್ರಿ ಕಳೆವ ಮೋತಿ

ಅರಳೀಕಟ್ಟೆ-ಆಂಜನೇಯನ ಗುಡಿ
ಹೈಕಳಿಗಾಗಿ ಇದ್ದ ಸರ್ಕಾರಿ ಶಾಲೆ
ದಿನಕ್ಕೊಮ್ಮೆಯಂತೆ ದಿಬ್ಬವೇರಿ ಬರುತ್ತಿದ್ದ
ಧೂಳೆಬ್ಬಿಸುವ ಶಿವನಾಮದ ಬಸ್ಸು

ಬೇಲಿಸಂದಿಯ ಓತಿಕ್ಯಾತ
ಸುತ್ತಲೂ ಹರಡಿದ ಗುಲಗಂಜಿ ಗಿಡ
ಮಾವು-ಹಲಸು-ಬಾಳೆ-ಸೀಬೆ
ಬೇಲದ ಹಣ್ಣಿನೊಡನೆ ಬೆಲ್ಲದ ಸವಿ

ಕೊನೆಯೇ ಇಲ್ಲದ ಆ ಹಳ್ಳಿ ನೆನಪುಗಳು
ದಿನವೂ ಮನದ ಏರಿ ಮೇಲೆ
ಬಸ್ಸಿನಂತೆಯೇ ಧೂಳೆಬ್ಬಿಸುತಿರುವುದು
ಹಿಂದಿರುಗಲಾರದ ಆ ಸವಿದಿನಗಳ ಅಣಕವೇನೋ!

ಮತ್ಸರ [06Apr06]

ಹಾದಿ-ಬೀದಿಯಲಿ ಅಲೆದಾಡುವ
ನಾಯಿ-ಬೆಕ್ಕು ಪೋಲಿ ದನಗಳು
ಹಾರಿ ಹರಿದಾಡುವ
ಕಾಗೆ-ಗುಬ್ಬಿ, ಹುಳ-ಹುಪ್ಪಟೆಗಳ
ಕಂಡು ಮತ್ಸರಿಸುವುದೇಕೋ ಮನವು?

ಎಷ್ಟು ಚೆನ್ನ ಅವುಗಳ ಜೀವನ
ಹೇಳುವವರಿಲ್ಲ ಕೇಳುವವರಿಲ್ಲ
ಓದು-ಕಲಿಕೆಯ ಹೇರಿಕೆಯಿಲ್ಲ
ಮನೆ-ಮಠ, ಆಸ್ತಿ-ಪಾಸ್ತಿಯ ನೊಗಭಾರವಿಲ್ಲ
ಧಾರ್ಮಿಕ-ದೈವಿಕ, ವೈಚಾರಿಕ-ಪ್ರಾಪಂಚಿಕ ಜವಾಬ್ದಾರಿಗಳಿಲ್ಲ
ಇಹ-ಪರ, ಸತ್ಯಾಸತ್ಯತೆಗಳ ಚಿಂತೆಯಿಲ್ಲ

ತಿಂದುಂಡು ಅಲೆದಾಡಿದರಷ್ಟಾಯ್ತು
ಹೊತ್ತೊತ್ತಿಗಷ್ಟಷ್ಟು ಅಲ್ಲಲ್ಲಿ
ಯಾರೋ ಕೊಟ್ಟ ಬಾಳೆ-ಬನ್ನು-ಹಾಲು
ಎಲ್ಲೋ ಸಿಕ್ಕ ಅನ್ನ-ನೀರಲಿ ಪಾಲು

ಮಕ್ಕಳು-ಮರಿ-ಮೊಮ್ಮಕ್ಕಳಿಗಷ್ಟು
ಚಿನ್ನ-ಬಣ್ಣ-ಸೈಟುಗಳ ಮಾಡಬೇಕಿಲ್ಲ
ಇರುವುದಕ್ಕಂದವಾದ ಅರಮನೆಯೂ ಬೇಕಿಲ್ಲ
ಮಡಿ-ಮೈಲಿಗೆಗಳ ಜ್ಞಾನವೂ ಅವಕ್ಕಿಲ್ಲ

ತಾವಾಯ್ತು ತಮ್ಮ ಪಾಡಾಯ್ತು
ದಿನ ಮುಗಿದೊಡೆ ಒಡೆಯನಿಗೆ ಲೆಕ್ಕ ಕೊಡುವುದೂ ಬೇಕಿಲ್ಲ
ಇದ್ದುದರಲೇ ಸ್ವರ್ಗ ಸುಖವನುಂಡು
ನಾಳಿನ ಚಿಂತೆಯ ಹೊದಿಕೆಯಿಲ್ಲದೆ
ನಿರಾಡಂಬರದಿಂದ ಮಲಗಿ ನಿದ್ರಿಸುವುದು ಎಷ್ಟು ಚೆನ್ನ?

ಬರವಣಿಗೆ

ಬರೆಯಬೇಕೆಂಬ ವಾಂಛೆ
ಭೋರ್ಗರೆಯುತಿದ್ದರೂ
ಬರೆಯಲು ಸಾಕಷ್ಟು
ಗ್ರಾಸವಾದ ವಿಷಯಗಳಿದ್ದರೂ

ಕೂತು ಕುಟ್ಟಲಾಗುತ್ತಿಲ್ಲವಲ್ಲ
ಕಡೇಪಕ್ಷ ಪುಸ್ತಕದ
ಕಡೇಪುಟದಲ್ಲಿ ಗೀಚಲೂ
ಆಗ್ತಿಲ್ಲವಲ್ಲವೆಂಬ ನೋವು

ತುಕ್ಕು ಹಿಡಿದ ಅಲುಗಿನಂತೆ
ಕಿಲುಬು ಕವಿದ ತಾಮ್ರದಂತೆ
ಮಸಿಮುಗಿದ ಲೇಖನಿಯಂತೆ
ಸಾಣೆ ಕಲ್ಲಿಗೆ ತಿಕ್ಕಿ,ಹುಳಿಯಲದ್ದಿ ಬಿಸಿ ಮುಟ್ಟಿಸಲು

ಚಾಲನೆಯೊಂದು ಬೇಕಷ್ಟೆ
ಬರೆದೂ ಬರೆದೂ ಓದುಗರ
ತಲೆ ಕೊರೆದು ಬಿಡಲು!

ನನ್ನ ಬರಹ

ಸಲೀಸಾಗಿ ಬರೆವ ಮುದ್ದಿನ ಪೆನ್ನಿರಲು
ನೋಡಿದೊಡೆ ಮುತ್ತಿಕ್ಕಬೇಕೆನಿಸುವ
ಬೆಣ್ಣೆಯಂತಹ ಬಿಳಿ ಹಾಳೆಗಳಿರಲು
ಜೊತೆಗೊಂದಿಷ್ಟು ತಲಹರಟೆಯ
ಲಗಾಮಿಲ್ಲದ ಬುದ್ಧಿಯಿರಲು
ಪುಟಗಟ್ಟಲೆ ಗೀಚಿ ಗೀಚಿ ತುಂಬಿಸುವುದು
ಮಹತ್ಸಾಧನೆಯೇನಲ್ಲ ಬಿಡಿ!

ಹಣ್ಣೆಲೆ ಚಿಗುರಿದಾಗ

ಹಣ್ಣೆಲೆ ಉದುರುವಾಗ
ಚಿಗುರೆಲೆ ನಕ್ಕಿತ್ತಂತೆ

ಹಣ್ಣೆಲೆ ಚಿಗುರಿದಾಗ
ಹಣ್ಣೆಲೆಗೂ luck-ಇತ್ತಂತೆ

ಮರುಜೀವ

ಕನ್ನಡ-ಸೇವೆ ಅನ್ನೋ ನಮ್ಮ Closed Group ಫೋರಂ ಪ್ರಾರಂಭವಾದ ಖುಷೀಲಿ ಹಾಗೆ ಹೊರಹೊಮ್ಮಿದ ನಾಲ್ಕು ಸಾಲುಗಳು.

ಹುದುಗಿಹೋಗಿದ್ದ ಮನೋಭಿಲಾಷೆ
ಸತ್ತು ಹೋಗಿದ್ದ ಕನಸುಗಳು
ಮುಗಿದೇ ಹೋಗಿದ್ದ ಕತೆಗಳು

ಮತ್ತೆ ಮಗದೊಮ್ಮೆ ಮರುಜೀವ ಪಡೆದು
ರೆಕ್ಕೆ ಬಿಚ್ಚಿ ಒಮ್ಮೆ ಒದರಿ
ಗರಿಗೆದರಿ ನಿಂತಿವೆ ಕಣ್ಮುಂದೆ

ಕನ್ನಡಕ್ಕಾಗಿ ಸದಾ ಹೋರಾಟ ನಡೆಸಲು
ನಿಶ್ಚಲ ನಿರಂತರ ಹಾರಾಟ ನಡೆಸಲು
ಎಲ್ಲೆಯೇ ಇಲ್ಲದ ದಿಗಂತದೆಡೆ ಹಾರಿಹೋಗಲು
ಸಜ್ಜಾಗಿ ನಿಂತಿರುವ ಈ ಸುಸಂದರ್ಭದಲಿ

ಕಂಬಾರರ ನುಡಿಯಂತೆ
"ಐತಿ ಜಾಗ ಒಳಗ...
ಬನ್ನಿರಿ ನೀವು ನಮ್ಮ ಬಳಗ..."

ಸಣ್ಣ ಕವನ

ಕಡೇ ಕವನ ಬರೆದೀಗಾಗಲೇ
ಎರಡು ಪೌರ್ಣಿಮೆ ಕಳೆದಿರಬೇಕು...

ಧಿಗ್ಗನೆ ಒಂದು ರಾತ್ರಿ ಅರೆನಿದ್ದೆಯಲ್ಲಿದ್ದಾಗ
ಇಂಥಾ ಯೋಚನೆಯೊಂದು ಮನದೊಳಗೆ ನುಸುಳಿ,
ನನ್ನ ಕವಿತ್ವವೆಲ್ಲೋ ಕಳೆದೇ ಹೋಯಿತೋ
ಎಂಬ ಭಯ ಕಾಡತೊಡಗಿ,

ಕೈಗೆ ಸಿಕ್ಕ ಕಾಗದದ ಚೂರಿನ ಮೇಲೆ
ಭಯದಲ್ಲೇ ಗೀಚಿದ ಕವನವಿದು!!!